ಕೃತಜ್ಞತಾಭಾವದಲ್ಲಿದ್ದರೆ ನಿರಾಶೆ ಬರದೆ ಮನಸ್ಸು ಆನಂದವಾಗಿದ್ದು ಚೆನ್ನಾಗಿ ಸಾಧನೆ ಮಾಡಬಹುದು !

ಪರಾತ್ಪರ ಗುರು ಡಾ. ಜಯಂತ ಆಠವಲೆ

ಸಾಧಕರು ಸ್ವಭಾವದೋಷಗಳ ಕೋಷ್ಟಕವನ್ನು ಬರೆಯುತ್ತಾರೆ. ಅವರು ಸ್ವಭಾವದೋಷ ಹೋಗಬೇಕೆಂದು ಸ್ವಯಂಸೂಚನೆಯನ್ನು ನೀಡುತ್ತಾರೆ. ಸಾಧಕರು ಇಷ್ಟೇ ಮಾಡುತ್ತಿದ್ದರೆ, ಅದು ಯೋಗ್ಯವಾಗಿರುತ್ತಿತ್ತು; ಆದರೆ ಅನೇಕ ಸಾಧಕರು ಆ ಸ್ವಭಾವದೋಷಗಳನ್ನು ದಿನವಿಡೀ ನೆನಪಿಸಿಕೊಂಡು ದುಃಖಿಯಾಗುತ್ತಾರೆ. ಕೆಲವು ಸಾಧಕರು ಇತರರ ಗುಣಗಳೊಂದಿಗೆ ಅಥವಾ ಪ್ರಗತಿಯೊಂದಿಗೆ ತುಲನೆ ಮಾಡಿ ‘ನಾವು ಅವರಿಗಿಂತ ಹಿಂದೆ ಇದ್ದೇವೆ’ ಎಂಬುದನ್ನು ನೆನಪಿಸಿಕೊಂಡು ದುಃಖಿಸುತ್ತಾರೆ. ಆದರೆ ಅವರಿಗೆ ಅರಿವಾಗದ ವಿಷಯವೆಂದರೆ, ‘ಪ್ರತಿ ತಿಂಗಳು ೧೦ ಸಾವಿರ, ೫೦ ಸಾವಿರ ಅಥವಾ ೧ ಲಕ್ಷ ರೂಪಾಯಿ ಗಳಿಸುವವರು ತಮಗಿಂತ ಹೆಚ್ಚು ಗಳಿಸುವವರೊಂದಿಗೆ ತುಲನೆ ಮಾಡಿದರೆ ಅವರು ದುಃಖಿಯಾಗುವುದು ಸಹಜ. ಅದರ ಬದಲು ೧೦ ಸಾವಿರ ರೂಪಾಯಿ ಗಳಿಸುವವನು ‘ನಾನು ನೌಕರಿ ಇಲ್ಲದವರಿಗಿಂತ ಹೆಚ್ಚು ಸುಖಿಯಾಗಿದ್ದೇನೆ’, ೧ ಲಕ್ಷ ರೂಪಾಯಿ ಗಳಿಸುವವನು ‘ನಾನು ೫೦ ಸಾವಿರ ಗಳಿಸುವವನಿಗಿಂತ ಹೆಚ್ಚು ಸುಖಿಯಾಗಿದ್ದೇನೆ’, ಎಂದು ವಿಚಾರ ಮಾಡಿದರೆ, ಅವರು ದುಃಖಿತರಾಗದೇ ಆನಂದಿಯಾಗಿರುವರು.

ಸಾಧಕರಿಗೆ ಅರಿವಾಗದ ವಿಚಾರವೆಂದರೆ, ದೇವರು ತನಗೆ ಮನುಷ್ಯಜನ್ಮ ನೀಡಿದ್ದಾರೆ, ಅವರಲ್ಲಿ ಸಾಧನೆಯ ಆಸಕ್ತಿಯನ್ನು ಮೂಡಿಸಿದ್ದಾರೆ, ತಮಗೆ ಸಾಧನೆಯಲ್ಲಿ ಮಾರ್ಗದರ್ಶನ ಸಿಗುತ್ತಿದೆ ಹಾಗೂ ಸಾಧನೆಯಲ್ಲಿ ತಮ್ಮ ಪ್ರಗತಿಯೂ ಆಗುತ್ತಿದೆ. ಇದನ್ನು ನೆನಪಿಸಿಕೊಂಡರೆ ‘ಪೃಥ್ವಿಯ ಮೇಲಿನ ಬಹುಸಂಖ್ಯಾತ ಮಾನವರ ತುಲನೆಯಲ್ಲಿ ನಾವು ಎಷ್ಟು ಭಾಗ್ಯವಂತರಾಗಿದ್ದೇವೆ’, ಎಂಬುದನ್ನು ಗಮನಿಸಿದರೆ ಅವರ ಮನಸ್ಸಿನಲ್ಲಿ ದೇವರ ಬಗ್ಗೆ ಸತತ ಕೃತಜ್ಞತಾಭಾವ ಮೂಡುವುದು.

ಸ್ವಯಂಸೂಚನೆಯ ಸತ್ರಗಳ ಸಮಯದಲ್ಲಿ ದೋಷಗಳು ನೆನಪಾಗುವುದು ಹಾಗೂ ಅವುಗಳನ್ನು ದೂರಗೊಳಿಸಲು ಸ್ವಯಂಸೂಚನೆ ನೀಡಬೇಕು. ಬಾಕಿ ಸಮಯ ನಿರಂತರ ಭಾವಪೂರ್ಣ ಜಪ ಮಾಡಬೇಕು ಅಥವಾ ಕೃತಜ್ಞತಾಭಾವದಲ್ಲಿರಬೇಕು. ‘ಭಾವವಿದ್ದಲ್ಲಿ ದೇವರು’ ಇರುವುದರಿಂದ ಆಗ ಮನಸ್ಸಿಗೆ ಆನಂದವೂ ಸಿಗುತ್ತದೆ. ನನ್ನ ಉದಾಹರಣೆಯಿಂದ ಕೃತಜ್ಞತಾಭಾವದಿಂದ ‘ಸೇವೆ ಹೇಗೆ ಮಾಡಬಹುದು ಹಾಗೂ ಮನಸ್ಸಿಗೆ ಹೇಗೆ ಆನಂದ ಸಿಗುತ್ತದೆ’, ಎಂಬುದು ಅರಿವಾಗಬಹುದು. ಹಿಂದೆ ನಾನು ಸತ್ಸಂಗ, ಅಭ್ಯಾಸವರ್ಗ, ಸಭೆ ಇತ್ಯಾದಿಗಳಿಗಾಗಿ ಹೋಗುತ್ತಿದ್ದೆ. ಈಗ ಹೊರಗೆ ಹೋಗಲು ಆಗದಿದ್ದರೂ ಇದುವರೆಗೆ ದೇವರು ಮಾಡಿಸಿಕೊಂಡ ವಿವಿಧ ಕಾರ್ಯಗಳನ್ನು ನೆನಪಿಸಿದರೂ ನನಗೆ ಕೃತಜ್ಞತಾಭಾವದಿಂದ ಆನಂದದಲ್ಲಿರಲು ಸಾಧ್ಯವಾಗುತ್ತದೆ.

– (ಪರಾತ್ಪರ ಗುರು) ಡಾ. ಆಠವಲೆ

ಸಾಧಕರೇ, ಸಾಧನೆಯಲ್ಲಿ ಪ್ರಗತಿಯಾಗಲು ಕೃತಜ್ಞತಾಭಾವದಲ್ಲಿರಿ

ಸಾಧಕರಿಗೆ ಸಾಧನೆಯಲ್ಲಿ ಪ್ರಗತಿ ಮಾಡಿಕೊಳ್ಳಲು ಸಾಧ್ಯವಾಗದಿದ್ದರೂ, ಸ್ವಭಾವದೋಷ ಹಾಗೂ ಅಹಂ ಇವುಗಳನ್ನು ಜಯಿಸಲು ಸಾಧ್ಯವಾಗದಿದ್ದರೂ, ಭಾವಜಾಗೃತಿಗಾಗಿ ಪ್ರಯತ್ನಿಸಿರಿ. ಭಾವ ಜಾಗೃತವಾದರೆ, ಸಾಧನೆಯ ಅನೇಕ ಅಡಚಣೆಗಳು ದೂರವಾಗುವವು ಹಾಗೂ ಪ್ರಗತಿಯಾಗುವುದು, ಎಂದು ಹೇಳಲಾಗುತ್ತದೆ. ಅದಕ್ಕಾಗಿ ಅವರಿಗೆ ‘ಭಾವಜಾಗೃತಿಗಾಗಿ ಸಾಧನೆ’ ಈ ಗ್ರಂಥದಲ್ಲಿ ಕೊಟ್ಟಂತೆ ಪ್ರಯತ್ನಿಸಲು ಹೇಳಲಾಗುತ್ತದೆ. ಅದು ಕೂಡ ಹೆಚ್ಚಿನವರಿಗೆ ಸಾಧ್ಯವಾಗುವುದಿಲ್ಲ. ಇಂತಹವರು ಈ ಮುಂದಿನಂತೆ ಪ್ರಯತ್ನಿಸಿದರೆ ಭಾವಜಾಗೃತವಾಗಲು ಸಹಾಯವಾಗುವುದು. ‘ನಾವು ಒಬ್ಬರೇ ಇರಲು ಅಥವಾ ಬದುಕಲು ಸಾಧ್ಯವಿಲ್ಲ’, ಎಂಬುದನ್ನು ಗಮನದಲ್ಲಿರಿಸಿ ಕುಟುಂಬದವರು ನಮಗೆ ಮಾಡುವ ಆರೈಕೆ ಹಾಗೂ ನಮ್ಮನ್ನು ಪ್ರೀತಿಸುವ, ಇತರರು ನಮಗೆ ಮಾಡುತ್ತಿರುವ ಸಹಾಯ, ಹಾಗೂ ಭಗವಂತನು ನಮಗೆ ನೀಡಿರುವ ಜೀವನ ಇತ್ಯಾದಿ ವಿಷಯಗಳ ಉದಾಹರಣೆಗಳನ್ನು ದೈನಂದಿನ ಜೀವನದಲ್ಲಿ ಹೆಜ್ಜೆ-ಹೆಜ್ಜೆಗೂ ನೆನಪಿಸಿಕೊಂಡರೆ ೫-೬ ವಾರಗಳಲ್ಲಿಯೆ ಕೃತಜ್ಞತಾಭಾವ ನಿರ್ಮಾಣವಾಗಲು ಆರಂಭವಾಗುತ್ತದೆ. ಮುಂದೆ ಅದು ಹೆಚ್ಚುತ್ತಾ ಹೋಗುತ್ತದೆ. ಅದರಿಂದ ಸಾಧನೆಯಲ್ಲಿ ಪ್ರಗತಿಯಾಗಲು ಆರಂಭವಾಗುತ್ತದೆ.

– (ಪರಾತ್ಪರ ಗುರು) ಡಾ. ಆಠವಲೆ

Leave a Comment