ತಿಲಕ ಧರಿಸುವ ಬಗೆಗಿನ ಆಚಾರಗಳು

ಸ್ನಾನದ ನಂತರ ತಮ್ಮತಮ್ಮ ಸಂಪ್ರದಾಯಕ್ಕನುಸಾರ ಹಣೆಯ ಮೇಲೆ ತಿಲಕ ಅಥವಾ ಮುದ್ರೆಯನ್ನು ಹಚ್ಚಿಕೊಳ್ಳಬೇಕು. ಉದಾ ವೈಷ್ಣವರು ಹಣೆಯ ಮೇಲೆ ಉದ್ದ (ನೇರ)ವಾದ ತಿಲಕವನ್ನು ಹಚ್ಚಿಕೊಳ್ಳುತ್ತಾರೆ ಮತ್ತು ಶೈವರು ಅಡ್ಡ ಪಟ್ಟೆಗಳನ್ನು ಅಂದರೆ ‘ತ್ರಿಪುಂಡ್ರ’ವನ್ನು ಹಚ್ಚಿಕೊಳ್ಳುತ್ತಾರೆ.

ಹಣೆಯ ಮೇಲೆ ತಿಲಕಧಾರಣೆ ಮಾಡುವುದರ ಹಿಂದಿನ ಶಾಸ್ತ್ರ

೧. ಮಾಯೆಯ ಆಸಕ್ತಿ ಇರುವವರೆಗೆ ಸಗುಣ ಈಶ್ವರನ ಪೂಜೆಯನ್ನು ಮಾಡುವುದು ಆವಶ್ಯಕವಾಗಿದೆ : ‘ಮನುಷ್ಯನ ದೇಹವನ್ನು ಈಶ್ವರನ ಮಂದಿರವೆಂದು ತಿಳಿದುಕೊಳ್ಳಲಾಗಿದೆ. ಸಹಸ್ರಾರ ಚಕ್ರವು ಮೂರ್ಧಾಸ್ಥಾನದಲ್ಲಿ (ಜುಟ್ಟಿನ ಜಾಗದಲ್ಲಿ) ಇರುತ್ತದೆ. ಅಲ್ಲಿ ನಿರ್ಗುಣ ಈಶ್ವರನ ವಾಸವಿರುತ್ತದೆ. ಭ್ರೂಮಧ್ಯದಲ್ಲಿ (ಎರಡು ಹುಬ್ಬುಗಳ ನಡುವೆ) ಆಜ್ಞಾಚಕ್ರದ ಮೇಲೆ ಸಗುಣ ಈಶ್ವರನ ವಾಸವಿರುತ್ತದೆ. ಮಾಯೆಯ ಆಸಕ್ತಿ ಇರುವವರೆಗೆ ಸಗುಣ ಈಶ್ವರನ ಪೂಜೆಯನ್ನು ಮಾಡುವುದು ಆವಶ್ಯಕವಾಗಿದೆ.

೨. ಭ್ರೂಮಧ್ಯದಲ್ಲಿ ವಾಸಿಸುತ್ತಿರುವ ಈಶ್ವರನಿಗೆ ತಿಲಕವನ್ನು ಹಚ್ಚುವುದರಿಂದ ದಿನವಿಡೀ ಮನಸ್ಸಿನಲ್ಲಿ ಭಕ್ತಿಭಾವ ಮತ್ತು ಶಾಂತಿಯು ನೆಲೆಸುವುದು

ತಿಲಕಧಾರಣೆ ಎಂದರೆ ಒಂದು ಚಿಕ್ಕ ದೇವರ ಪೂಜೆಯೇ ಆಗಿದೆ.

ತಿಲಕಧಾರಣೆಯನ್ನು ಮಾಡುವಾಗ ಮಧ್ಯಮಾವನ್ನು (ಮಧ್ಯದ ಬೆರಳು) ಉಪಯೋಗಿಸಬೇಕು ಎಂಬ ಶಾಸ್ತ್ರವಿದೆ. ಮಧ್ಯಮಾವು ಹೃದಯಕ್ಕೆ ಸಂಬಂಧಿಸಿರುವುದರಿಂದ ಈ ಬೆರಳಿನಿಂದ ಪ್ರವಹಿಸುವ ಸ್ಪಂದನಗಳು ಹೃದಯದವರೆಗೆ ಹೋಗುತ್ತವೆ. ಭ್ರೂಮಧ್ಯದಲ್ಲಿ ವಾಸ ಮಾಡುವ ಈಶ್ವರನಿಗೆ ತಿಲಕವನ್ನು ಹಚ್ಚುವಾಗ ಮೂರನೆಯ ಕಣ್ಣಿನಿಂದ ಹೊರಹೊಮ್ಮುವ ಸ್ಪಂದನಗಳು ಮಧ್ಯಮಾದಿಂದ ಹೃದಯದವರೆಗೆ ಹೋಗಿ ದಿನವಿಡೀ ಮನಸ್ಸಿನಲ್ಲಿ ಭಕ್ತಿಭಾವ ಮತ್ತು ಶಾಂತಿಯು ನೆಲೆಸುತ್ತದೆ.’

(ತಿಲಕಧಾರಣೆಯ ಮೇಲಿನ ಕೃತಿಯು ಪುರುಷರ ಬಗ್ಗೆ ಇದೆ. ಸ್ತ್ರೀಯರು ತಮಗೆ ಕುಂಕುಮವನ್ನು ಹಚ್ಚಿಕೊಳ್ಳುವಾಗ ಅನಾಮಿಕಾದಿಂದ ಮತ್ತು ಇತರ ಸ್ತ್ರೀಯರಿಗೆ ಅಥವಾ ಪುರುಷರಿಗೆ ಕುಂಕುಮವನ್ನು ಹಚ್ಚುವಾಗ ಮಧ್ಯಮಾದಿಂದ ಹಚ್ಚಬೇಕು. – ಸಂಕಲನಕಾರರು)

ತಿಲಕ ಅಥವಾ ಮುದ್ರೆಯನ್ನು ಹಚ್ಚುವುದರ ವಿಧಗಳು

೧. ಊರ್ಧ್ವಪುಂಡ್ರ : ಹಣೆಯ ಮೇಲೆ ಒಂದು ಅಥವಾ ಒಂದಕ್ಕಿಂತ ಹೆಚ್ಚು ನೇರ (ಉದ್ದ) ರೇಖೆಗಳನ್ನು ಎಳೆಯುವುದಕ್ಕೆ ‘ಊರ್ಧ್ವಪುಂಡ್ರ’ವೆಂದು ಹೇಳುತ್ತಾರೆ. ಶ್ರೀವಿಷ್ಣುವಿನಿಂದಾಗಿ ಪವಿತ್ರವಾದ ಕ್ಷೇತ್ರದಲ್ಲಿನ ಮಣ್ಣು, ಗಂಗೆ, ಸಿಂಧು ಮುಂತಾದ ಪವಿತ್ರ ನದಿಗಳ ತೀರದಲ್ಲಿನ ಮಣ್ಣನ್ನು ಅಥವಾ ಗೋಪಿಚಂದನವನ್ನು ಊರ್ಧ್ವ ಪುಂಡ್ರವನ್ನು ಹಚ್ಚಿಕೊಳ್ಳಲು ಉಪಯೋಗಿಸಬೇಕು.

೨. ತ್ರಿಪುಂಡ್ರ : ಹಣೆಯ ಮೇಲೆ ಹಚ್ಚಿದಂತಹ ಮೂರು ಅಡ್ಡ ರೇಖೆಗಳಿಗೆ ‘ತ್ರಿಪುಂಡ್ರ’ ಎನ್ನುತ್ತಾರೆ. ತ್ರಿಪುಂಡ್ರ ಮುದ್ರೆಯನ್ನು ಭಸ್ಮದಿಂದ ಹಚ್ಚಿಕೊಳ್ಳುತ್ತಾರೆ.

೩. ತಿಲಕವನ್ನು ಚಂದನದಿಂದ ಹಚ್ಚಿಕೊಳ್ಳುತ್ತಾರೆ.

(ಆಧಾರ : ಸನಾತನದ ಗ್ರಂಥ ‘ಸ್ನಾನದಿಂದ ಮುಸ್ಸಂಜೆಯವರೆಗಿನ ಆಚಾರಗಳ ಹಿಂದಿನ ಶಾಸ್ತ್ರ)

1 thought on “ತಿಲಕ ಧರಿಸುವ ಬಗೆಗಿನ ಆಚಾರಗಳು”

Leave a Comment