ರುದ್ರಾಕ್ಷಿಧಾರಣೆ

ಶಿವನ ಪೂಜೆಯನ್ನು ಮಾಡುವಾಗ ಕೊರಳಿನಲ್ಲಿ ರುದ್ರಾಕ್ಷಿಮಾಲೆಯನ್ನು ಅವಶ್ಯವಾಗಿ ಹಾಕಿಕೊಳ್ಳಬೇಕು. ನಾಥ ಸಂಪ್ರದಾಯ ಹಾಗೂ ವಾಮ ಸಂಪ್ರದಾಯದವರು ಮತ್ತು ಕಾಪಾಲಿಕರು ರುದ್ರಾಕ್ಷಿಯ ಮಾಲೆಯನ್ನು ವಿಶೇಷವಾಗಿ ಉಪಯೋಗಿಸುತ್ತಾರೆ. ಯೋಗಿಗಳೂ ರುದ್ರಾಕ್ಷಿಯ ಮಾಲೆಯನ್ನು ಧರಿಸುತ್ತಾರೆ.

‘ರುದ್ರಾಕ್ಷ’ ಶಬ್ದದ ವ್ಯುತ್ಪತ್ತಿ ಮತ್ತು ಅರ್ಥ

‘ರುದ್ರಾಕ್ಷ’ ಎಂಬ ಶಬ್ದವು ‘ರುದ್ರ + ಅಕ್ಷ’ ಎಂಬ ಎರಡು ಶಬ್ದಗಳಿಂದ ರೂಪುಗೊಂಡಿದೆ. ‘ರುದ್ರ’ ಶಬ್ದದ ವಿವಿಧ ಅರ್ಥಗಳಲ್ಲಿ ಒಂದನ್ನು ಕೆಳಗೆ ನೀಡಲಾಗಿದೆ. ‘ಅಕ್ಷ’ ಶಬ್ದದ ಕೆಲವು ಅರ್ಥಗಳ ಆಧಾರದ ಮೇಲೆ ‘ರುದ್ರಾಕ್ಷ’ ಶಬ್ದಕ್ಕೆ ಮುಂದಿನ ಅರ್ಥಗಳಿವೆ –

೧. ಅಕ್ಷ ಎಂದರೆ ಕಣ್ಣು. ‘ರುದ್ರ + ಅಕ್ಷ’ ಎಂದರೆ ಯಾವುದು ಎಲ್ಲವನ್ನೂ ನೋಡಬಲ್ಲದೋ ಮತ್ತು ಮಾಡಬಲ್ಲದೋ ಅದು ರುದ್ರಾಕ್ಷ (ಉದಾ.ಮೂರನೆಯ ಕಣ್ಣು). ಅಕ್ಷ ಎಂದರೆ ಅಕ್ಷ ರೇಖೆ. ಕಣ್ಣು ಒಂದೇ ಅಕ್ಷರೇಖೆಯ ಸುತ್ತಲೂ ತಿರುಗುತ್ತದೆ; ಆದುದರಿಂದ ಅದಕ್ಕೆ ಅಕ್ಷ ಎನ್ನುತ್ತಾರೆ.

೨. ರುದ್ರ ಎಂದರೆ ಅಳುಮುಖದವನು. ‘ಅ’ ಎಂದರೆ ತೆಗೆದುಕೊಳ್ಳುವುದು ಮತ್ತು ‘ಕ್ಷ’ ಎಂದರೆ ಕೊಡುವುದು; ಅಕ್ಷವೆಂದರೆ ತೆಗೆದುಕೊಳ್ಳುವ ಅಥವಾ ಕೊಡುವ ಕ್ಷಮತೆ. ರುದ್ರಾಕ್ಷವೆಂದರೆ ಅಳುವವನಿಂದ ಅವನ ದುಃಖವನ್ನು ತೆಗೆದುಕೊಳ್ಳುವ ಹಾಗೂ ಅವನಿಗೆ ಸುಖವನ್ನು ಕೊಡುವ ಕ್ಷಮತೆಯಿರುವವನು.

ರುದ್ರವೃಕ್ಷ (ರುಧಿರವೃಕ್ಷ, ರುದ್ರಾಕ್ಷವೃಕ್ಷ)

ತಾರಕಪುತ್ರರು ಅಧರ್ಮಾಚರಣೆಯಲ್ಲಿ ತೊಡಗಿದರೆಂಬ ವಿಷಾದದಿಂದ ಶಂಕರನ ಕಣ್ಣುಗಳಿಂದ ಕೆಳಗೆ ಬಿದ್ದ ಅಶ್ರುಗಳಿಂದ ‘ರುದ್ರಾಕ್ಷವೃಕ್ಷ’ವು ತಯಾರಾಗುವುದು ಮತ್ತು ಶಿವನು ತಾರಕ ಪುತ್ರರನ್ನು ನಾಶಗೊಳಿಸುವುದು: ತಾಡಿನ್‌ಮಾಲಿ, ತಾರಕಾಕ್ಷ ಮತ್ತು ಕಮಲಾಕ್ಷ ಎಂಬ ತಾರಕ ಪುತ್ರರು ಧರ್ಮಾಚರಣೆ ಮತ್ತು ಶಿವಭಕ್ತಿಯನ್ನು ಮಾಡಿ ದೇವತ್ವವನ್ನು ಪ್ರಾಪ್ತಿ ಮಾಡಿಕೊಂಡರು. ಕೆಲವು ಸಮಯದ ನಂತರ ಮತ್ತೆ ಅವರು ಅಧರ್ಮಾಚರಣೆಯನ್ನು ಮಾಡಲು ಪ್ರಾರಂಭಿಸಿದುದನ್ನು ನೋಡಿ ಶಂಕರನು ವಿಷಾದಗ್ರಸ್ತನಾದನು. ಅವನ ನೇತ್ರಗಳು ಅಶ್ರುಗಳಿಂದ ತುಂಬಿದವು. ಅವನ ನೇತ್ರದಿಂದ ನಾಲ್ಕು ಹನಿಗಳು ಪೃಥ್ವಿಯ ಮೇಲೆ ಬಿದ್ದವು. ಆ ಅಶ್ರುಗಳಿಂದ ಹುಟ್ಟಿದ ವೃಕ್ಷಗಳಿಗೆ ‘ರುದ್ರಾಕ್ಷವೃಕ್ಷ’ ಎನ್ನುತ್ತಾರೆ. ಆ ನಾಲ್ಕು ವೃಕ್ಷಗಳಿಂದ ಕೆಂಪು, ಕಪ್ಪು, ಹಳದಿ ಮತ್ತು ಬಿಳಿ ರುದ್ರಾಕ್ಷಗಳು ನಿರ್ಮಾಣವಾದವು. ಅನಂತರ ಶಿವನು ತಾರಕಪುತ್ರರನ್ನು ನಾಶ ಗೊಳಿಸಿದನು.
– ಗುರುದೇವ ಡಾ.ಕಾಟೇಸ್ವಾಮೀಜಿ (೩೦)

ರುದ್ರವೃಕ್ಷದ ಸಾಮಾನ್ಯ ಮಾಹಿತಿ

rudraksh1.jpg

ಇದು ಸಮುದ್ರದ ಮಟ್ಟದಿಂದ ಮೂರು ಸಾವಿರ ಮೀ. ಎತ್ತರದಲ್ಲಿ ಅಥವಾ ಮೂರು ಸಾವಿರ ಮೀ.ಸಮುದ್ರದಾಳದಲ್ಲಿ ದೊರಕುತ್ತದೆ. ರುದ್ರಾಕ್ಷಿಯ ಗಿಡಗಳು ತಗ್ಗುಪ್ರದೇಶದಲ್ಲಿ ಬೆಳೆಯುತ್ತವೆ, ಸಮತಟ್ಟು ಪ್ರದೇಶದಲ್ಲಿ ಬೆಳೆಯುವುದಿಲ್ಲ. ಈ ಗಿಡದ ಎಲೆಗಳು ಹುಣಸೆ ಮರದ ಅಥವಾ ಗುಲಗಂಜಿಯ ಎಲೆಯಂತೆ, ಆದರೆ ಸ್ವಲ್ಪ ಉದ್ದವಾಗಿರುತ್ತವೆ. ಈ ಗಿಡಗಳಿಗೆ ಒಂದು ವರ್ಷದಲ್ಲಿ ಒಂದರಿಂದ ಎರಡು ಸಾವಿರ ಹಣ್ಣುಗಳು ಬಿಡುತ್ತವೆ. ಹಿಮಾಲಯದಲ್ಲಿರುವ ಯತಿಗಳು ಕೇವಲ ರುದ್ರಾಕ್ಷಿಫಲಗಳನ್ನೇ ತಿನ್ನುತ್ತಾರೆ. ಈ ಫಲಕ್ಕೆ ಅಮೃತಫಲ ಎಂದೂ ಕರೆಯುತ್ತಾರೆ. ಇವುಗಳನ್ನು ತಿಂದರೆ ಬಾಯಾರಿಕೆಯಾಗುವುದಿಲ್ಲ.

ರುದ್ರಾಕ್ಷಿ (ರುದ್ರಾಕ್ಷಿ ಹಣ್ಣುಗಳು)

rudraksha+nija.jpg

ರುದ್ರಾಕ್ಷದ ಹಣ್ಣುಗಳು ಗಿಡದ ಮೇಲೆ ಹಣ್ಣಾಗಿ ಚಳಿಗಾಲದಲ್ಲಿ ಕೆಳಗೆ ಬೀಳುತ್ತವೆ. ಅನಂತರ ಒಳಗಿನ ಬೀಜಗಳು ಒಣಗುತ್ತವೆ. ಒಂದು ಹಣ್ಣಿನಲ್ಲಿ ೧೫-೧೬ ಬೀಜಗಳು (ರುದ್ರಾಕ್ಷಿಗಳು) ಇರುತ್ತವೆ. ಹಣ್ಣಿನಲ್ಲಿ ಬೀಜಗಳು ಹೆಚ್ಚಿಗೆ ಇದ್ದರೆ, ಬೀಜಗಳ ಆಕಾರವು ಕಡಿಮೆಯಿರುತ್ತದೆ ಮತ್ತು ಅವುಗಳ ಬೆಲೆಯೂ ಕಡಿಮೆಯಿರುತ್ತದೆ. ಚಿಕ್ಕ ರುದ್ರಾಕ್ಷಿಗಳನ್ನು ಬಿಡಿಬಿಡಿಯಾಗಿ ಬಳಸದೆ ಒಂದು ಮಾಲೆಯಲ್ಲಿ ಪೋಣಿಸುತ್ತಾರೆ ಮತ್ತು ಅವುಗಳೊಂದಿಗೆ ಒಂದು ದೊಡ್ಡ ರುದ್ರಾಕ್ಷಿಯನ್ನೂ ಪೋಣಿಸುತ್ತಾರೆ. ರುದ್ರಾಕ್ಷಿಗೆ ಮೊದಲಿನಿಂದಲೇ ಒಂದು ರಂಧ್ರವಿರುತ್ತದೆ, ಅದನ್ನು ಮಾಡಬೇಕಾಗುವುದಿಲ್ಲ. ಆ ರಂಧ್ರಕ್ಕೆ ವಾಹಿನಿ ಎನ್ನುತ್ತಾರೆ. ರುದ್ರಾಕ್ಷಿಯ ಬಣ್ಣವು ನಸುಗೆಂಪಾಗಿರುತ್ತದೆ. ಅದರ ಆಕಾರವು ಮೀನಿನಂತೆ ಚಪ್ಪಟೆಯಾಗಿರುತ್ತದೆ. ಅದರ ಮೇಲೆ ಹಳದಿ ಬಣ್ಣದ ಪಟ್ಟೆಗಳಿರುತ್ತವೆ. ಅದರ ಒಂದು ಬದಿಯಲ್ಲಿ ತೆರೆದಿರುವಂತೆ ಬಾಯಿ ಇರುತ್ತದೆ.

೧೦ ಮುಖಕ್ಕಿಂತ ಹೆಚ್ಚು ಮುಖಗಳಿರುವ ರುದ್ರಾಕ್ಷಿಗಳಿಗೆ ‘ಮಹಾರುದ್ರ’ ಎಂದು ಹೇಳುತ್ತಾರೆ.
– ಯೋಗತಜ್ಞ ಪ.ಪೂ.ದಾದಾಜಿ ವೈಶಂಪಾಯನ (ಜೇಷ್ಠ ಶು.೫, ಕಲಿಯುಗ ವರ್ಷ ೫೧೧೧ ೨೯.೫.೨೦೦೯)

(ರುದ್ರಾಕ್ಷಿಯ ವೈಶಿಷ್ಟ್ಯಗಳು, ರುದ್ರಾಕ್ಷಿಯ ಕಾರ್ಯ, ರುದ್ರಾಕ್ಷಿಯ ಲಾಭಗಳು, ನಿಜವಾದ ರುದ್ರಾಕ್ಷಿ ಮತ್ತು ನಕಲಿ ರುದ್ರಾಕ್ಷಿಯ ವ್ಯತ್ಯಾಸ, ಎಷ್ಟು ರುದ್ರಾಕ್ಷಿಗಳನ್ನು ಧರಿಸಬೇಕು? ಎಷ್ಟು ಮುಖಗಳಿರುವ ರುದ್ರಾಕ್ಷಿ ಧರಿಸಬೇಕು ಮತ್ತು ಅದರ ಫಲವೇನು? ಮುಂತಾದ ಅನೇಕ ಮಾಹಿತಿಗಾಗಿ ಸನಾತನ ಸಂಸ್ಥೆ ನಿರ್ಮಿಸಿದ “ಶಿವ” ಗ್ರಂಥವನ್ನು ಓದಿರಿ.)

1 thought on “ರುದ್ರಾಕ್ಷಿಧಾರಣೆ”

Leave a Comment