ಆಚಮನ ಮಂತ್ರದಿಂದಾಗುವ ವೈಜ್ಞಾನಿಕ ಲಾಭ

ಕೇಶವಾಯ ಸ್ವಾಹಾ

ನಾರಾಯಣಾಯ ಸ್ವಾಹಾ

ಮಾಧವಾಯ ಸ್ವಾಹಾ

ಈ ಮೇಲಿನ ಮಂತ್ರವನ್ನು ಜಪಿಸುವಾಗ ಉದ್ದರಣೆಯಿಂದ 3 ಸಲ ನೀರನ್ನು ಅಂಗೈಯಲ್ಲಿ ಹಾಕಿ ಕುಡಿಯಲು ಕಾರಣ. ಶಬ್ದವು ಗಂಟಲಿನಿಂದ ಬರುವ ಕಾರಣ ಅಲ್ಲಿರುವ ವಾಯುವು ಹೊರಕ್ಕೆ ಬಂದಾಗ ತೊಂದರೆಯಾಗದಿರಲಿ, ಶಬ್ದವು ಸುಗಮವಾಗಿ ಗಂಟಲಿನಿಂದ ಬರಲಿ ಎಂಬ ಉದ್ದೇಶದಿಂದ ನಮ್ಮ ಋಷಿ ಮುನಿಗಳು ನಮಗೆ ತೋರಿಸಿದ ಸರಳ ಮಾರ್ಗ.

ಕೇಶವಾಯ ಸ್ವಾಹಾ – ಈ ಮಂತ್ರವು ಗಂಟಲಿನಿಂದ ಹೊರಡುತ್ತದೆ. ಹೀಗೆ ಉಚ್ಚರಿಸುವಾಗ ಗಂಟಲಿಗೆ ಸಂಬಂಧಪಟ್ಟ ಸ್ನಾಯು ಮತ್ತು ನರಗಳಿಗೆ ವ್ಯಾಯಾಮ ಕೊಡುವುದೇ ಈ ಮಂತ್ರದ ಉದ್ದೇಶ.

ನಾರಾಯಣಾಯ ಸ್ವಾಹಾ – ಈ ಮಂತ್ರವು ನಾಲಗೆಯ ಸಹಾಯದಿಂದ ಹೊರಡುತ್ತದೆ.ಈ ಮಂತ್ರ ನಾಲಿಗೆಗೆ ಸಂಬಂಧಪಟ್ಟ ನರಗಳಿಗೆ ವ್ಯಾಯಾಮ ಕೊಡುತ್ತದೆ.

ಮಾಧವಾಯ ಸ್ವಾಹಾ – ಈ ಮಂತ್ರವು ತುಟಿಗಳ ಸಹಾಯದಿಂದ ಹೊರಡುತ್ತದೆ.

ಈ ಮೇಲಿನ ಮಂತ್ರಗಳನ್ನು ಅನೇಕ ಸಾರಿ ಉಚ್ಚಾರ ಮಾಡುವುದರಿಂದ, ಗಂಟಲು, ನಾಲಿಗೆ, ತುಟಿಗಳಿಗೆ ಸಂಬಂದಪಟ್ಟ ಸ್ನಾಯುಗಳಿಗೆ ಏಕಕಾಲದಲ್ಲಿ ವ್ಯಾಯಾಮ ಕೊಟ್ಟಂತಾಗುತ್ತದೆ. ಹೀಗೆ ಅನೇಕ ಸಾರಿ ಜಪಿಸುವುದರಿಂದ ಮುಂದೆ ಹೇಳಬೇಕಾದ

ಮಂತ್ರಗಳು ಶುದ್ದವಾಗಿ ಸ್ಪುಟವಾಗಿ ಹೊರಡುತ್ತದೆ. ಶರೀರಶಾಸ್ತ್ರವು ಏನು ಹೇಳುತ್ತದೋ ಅದನ್ನು ಒಂದು ಆಚರಣೆಯಂತೆ ಆಚರಿಸಲು ಧಾರ್ಮಿಕ ಕಾರಣ ಕೊಟ್ಟು ನಮ್ಮ ಹಿಂದಿನ ಋಷಿ ಮುನಿಗಳು ಕಡ್ಡಾಯವಾಗಿ ಮಾಡಲು ತಿಳಿಸಿದ್ದಾರೆ.

ಪೂಜೆಗೆ ಕುಳಿತ ಬ್ರಾಹ್ಮಣರು ಮಂತ್ರ ಮಾಡುವಾಗ ಪದೇ ಪದೇ ಅಂಗೈಯಲ್ಲಿ ನೀರನ್ನು ಹಾಕಿ ಇದೇ ಮಂತ್ರವನ್ನು ಹೇಳುತ್ತಾರೆ.
ಕಾರಣ ಮಂತ್ರವೆಲ್ಲಾ ಸಂಸ್ಕೃತ. ಅದನ್ನು ಉಚ್ಚಾರ ಮಾಡಬೇಕಾದರೆ ನಾಲಗೆ ತುಟಿ ಗಂಟಲಿಗೆ ವ್ಯಾಯಾಮ ಬೇಕು, ಮಂತ್ರ ಗಂಟಲಿನಿಂದ ಸರಿಯಾಗಿ ಹೊರಡಬೇಕಾದರೆ ನೀರು ಗಂಟಲನ್ನು ತಂಪು ಮಾಡುತ್ತಲೇ ಇರಬೇಕು.

ನೀರನ್ನು ಅಂಗೈಯಲ್ಲಿ ಹಾಕಿ ಕುಡಿಯುವ ಕಾರಣ ಅಂಗೈಯಲ್ಲಿ ಇರುವ ವಿದುಚ್ಛಕ್ತಿಯ ಸ್ವಲ್ಪ ಭಾಗ ನೀರಿನಲ್ಲಿ ಬೆರೆಯುತ್ತದೆ, ಆ ನೀರನ್ನು ಕುಡಿದರೆ ಅದು ಹೊಟ್ಟೆಗೆ ಹೋಗಿ ಅಲ್ಲಿರುವ ವಿದ್ಯುತ್ತಿನ ಜೊತೆ ಬೆರೆತು ಶರೀರದಾದ್ಯಂತವೂ ಒಂದೇ ಸಮನೆ ಇರುವಂತೆ ಮಾಡುತ್ತದೆ. ಈ ಕಾರಣದಿಂದ ನೀರನ್ನು ಅಂಗೈಯಲ್ಲಿಯೇ ಹಾಕಿ ಕುಡಿಯಬೇಕು.

(ಟಿಪ್ಪಣಿ – ವೈಜ್ಞಾನಿಕ ಕಾರಣಗಳಿಗಿಂತ ಆಧ್ಯಾತ್ಮಿಕ ಲಾಭಕ್ಕಾಗಿ, ಈಶ್ವರಪ್ರಾಪ್ತಿಗಾಗಿ, ಭಾವದಿಂದ ಇಂತಹ ಕೃತಿಗಳನ್ನು ಮಾಡುವುದು ಅತ್ಯಂತ ಶ್ರೇಷ್ಠವಾಗಿದೆ. ಏಕೆಂದರೆ ವ್ಯಾಯಮ ಆಗಲು ಮಂತ್ರಗಳನ್ನೇ ಹೇಳಬೇಕೆಂದಿಲ್ಲ. ಯೋಗಾಸನಗಳನ್ನು ಮಾಡಿದರೂ ಶರೀರದ ವ್ಯಾಯಾಮವಾಗುತ್ತದೆ. ಇಂದಿನ ಆಧುನಿಕ ಜನರು, ಬುದ್ಧಿಜೀವಿ (?) ಗಳು ಎಲ್ಲ ವಿಷಯವನ್ನು ಕೇವಲ ವಿಜ್ಞಾನವನ್ನು ಹೋಲಿಸಿಯೇ ನೋಡುತ್ತಾರೆ. ಯಾವುದು ತಮ್ಮ ಬುದ್ಧಿಶಕ್ತಿಗೆ ನಿಲುಕುವುದಿಲ್ಲವೋ, ಅದನ್ನು ನಂಬುವುದಿಲ್ಲ. ಇಂತಹ ವೈಜ್ಞಾನಿಕ ವಿವರಣೆಗಳಿಂದ ಮನುಷ್ಯನಿಗೆ ಕೇವಲ ಶಾರೀರಿಕ ಲಾಭವಾಗುತ್ತದೆ. ಇದು ಕನಿಷ್ಠ ಸ್ತರದ್ದಾಗಿದೆ. ಈ ಬ್ಲಾಗ್‌ನಲ್ಲಿ ಹೆಚ್ಚಾಗಿ ಎಲ್ಲ ವಿಷಯವನ್ನೂ ಆಧ್ಯಾತ್ಮಿಕ ಕಾರಣಗಳ ಸಹಿತ ವಿವರಿಸಿದೆ. ಆದರೂ ಜನರಿಗೆ ಕನಿಷ್ಠ ನಂಬಿಕೆಯಾದರೂ ಹುಟ್ಟಲಿ ಎಂಬ ಉದ್ದೇಶದಿಂದ ಈ ವಿಷಯವನ್ನು ಹಾಕಿದ್ದೇವೆ. ಹಾಗಾಗಿ ಆಸ್ತಿಕ ಬಂಧುಗಳು ಆಚಮನ ಮಾಡುವಾಗ ಶರೀರಕ್ಕಾಗುವ ವ್ಯಾಯಾಮದ ಕಡೆ ಗಮನ ಕೊಡದೇ, ಕೇಶವ, ನಾರಾಯಣ, ಮಾಧವ ಎಂಬ ನಾಮದಲ್ಲಿರುವ ಭಗವಂತನನ್ನು ಸ್ಮರಿಸಬೇಕು. ಇದರಿಂದಲೇ ನಮ್ಮ ನಿಜವಾದ ಆಧ್ಯಾತ್ಮಿಕ ಉನ್ನತಿಯಾಗಲು ಸಾಧ್ಯ.)

2 thoughts on “ಆಚಮನ ಮಂತ್ರದಿಂದಾಗುವ ವೈಜ್ಞಾನಿಕ ಲಾಭ”

Leave a Comment