ನಾಗಗಳ ಆಧ್ಯಾತ್ಮಿಕ ಮಹತ್ವ ಮತ್ತು ನಾಗರಪಂಚಮಿ

ಕು. ಮಧುರಾ ಭೋಸಲೆ

ನಾಗರಪಂಚಮಿ ನಿಮಿತ್ತ ನಾವು ನಾಗಗಳ ಆಧ್ಯಾತ್ಮಿಕ ಮಹತ್ವ ಮತ್ತು ನಾಗಪಂಚಮಿಯ ದಿನದಂದು ಮಾಡಲಾಗುವ ನಾಗಗಳ ಉಪಾಸನೆಯ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ.

೧. ನಾಗಗಳ ನಿರ್ಮಿತಿ

ಕಶ್ಯಪ ಋಷಿ ಮತ್ತು ಕದ್ರೂ ಋಷಿಗಳಿಂದ ಎಲ್ಲ ನಾಗಗಳ ನಿರ್ಮಿತಿಯಾಯಿತು.

೨. ನಾಗಗಳ ವಿಧಗಳು

ತ್ರಿಗುಣಗಳಂತೆ ನಾಗಗಳಲ್ಲಿ ಪ್ರಮುಖ ಮೂರು ವಿಧಗಳಿವೆ.

೨ ಅ. ತಾಮಸಿಕ ನಾಗ : ಈ ನಾಗಗಳು ಮುಖ್ಯವಾಗಿ ಕಪ್ಪು ಬಣ್ಣದ್ದಾಗಿದ್ದು ಅವು ಪಾತಾಳದ ನಾಗಲೋಕದಲ್ಲಿ ವಾಸಿಸುತ್ತವೆ. ದೊಡ್ಡ ಅನಿಷ್ಟ ಶಕ್ತಿಗಳು ಈ ನಾಗಗಳನ್ನು ಸೂಕ್ಷ್ಮ ಯುದ್ಧದಲ್ಲಿ ಶತ್ರುಗಳ ಮೇಲೆ ವಿಷಪ್ರಯೋಗ ಮಾಡಲು ಶಸ್ತ್ರಗಳಂತೆ ಉಪಯೋಗಿಸುತ್ತವೆ. ಪಾತಾಳದ ನಾಗಗಳು ಪೃಥ್ವಿಯ ಮೇಲಿನ ನಾಗಗಳಿಗಿಂತ ಲಕ್ಷ ಪಟ್ಟು ಹೆಚ್ಚು ಸಾಮರ್ಥ್ಯಶಾಲಿ ಮತ್ತು ಸಾವಿರ ಪಟ್ಟು ವಿಷಕಾರಿಯಾಗಿರುತ್ತವೆ.

೨ ಆ. ರಾಜಸಿಕ ನಾಗ : ಈ ನಾಗಗಳು ಪೃಥ್ವಿಯ ಮೇಲೆ ವಾಸಿಸುತ್ತದೆ. ನಾಗಯೋನಿಯಲ್ಲಿ ಜನಿಸಿದ್ದರಿಂದ ಈ ನಾಗಗಳ ಆಚರಣೆಯು ಸಾಮಾನ್ಯ ನಾಗಗಳಂತೆ ಇರುತ್ತದೆ. ಅವು ಕಪ್ಪು, ನೀಲಿ, ಕಂದು, ಚಾಕಲೇಟ ಮುಂತಾದ ಬಣ್ಣದ್ದಾಗಿರುತ್ತವೆ.

೨ ಇ. ಸಾತ್ತ್ವಿಕ ನಾಗ : ಈ ನಾಗಗಳು ದೈವೀಯಾಗಿರುವುದರಿಂದ ಅವು ಶಿವಲೋಕದ ಸಮೀಪದಲ್ಲಿರುವ ದೈವೀ ನಾಗಲೋಕದಲ್ಲಿ ವಾಸಮಾಡುತ್ತವೆ. ಅವುಗಳ ಬಣ್ಣ ಹಳದಿಯಿರುತ್ತದೆ ಮತ್ತು ತಲೆಯ ಮೇಲೆ ಕೆಂಪು ಅಥವಾ ನೀಲಿ ಬಣ್ಣದ ನಾಗಮಣಿಯಿರುತ್ತದೆ. ಸಾತ್ತ್ವಿಕ ನಾಗವು ಪಾತಾಳದ ನಾಗಗಳ ತುಲನೆಯಲ್ಲಿ ಲಕ್ಷ ಪಟ್ಟು ಹೆಚ್ಚು ಸಾಮರ್ಥ್ಯವುಳ್ಳದ್ದಾಗಿರುತ್ತದೆ. ಸಾತ್ತ್ವಿಕ ನಾಗಗಳನ್ನು ವಿವಿಧ ದೇವತೆಗಳು ಧರಿಸಿದ್ದಾರೆ. ಶಿವನ ಕೊರಳಲ್ಲಿ ವಾಸುಕಿ ಎಂಬ ನಾಗವಿದೆ. ಗಣಪತಿಯ ಹೊಟ್ಟೆಗೆ ಸುತ್ತು ಹಾಕಿದ ಜಾಗೃತ ವಿಶ್ವಕುಂಡಲಿನಿಯ ಪ್ರತೀಕವಾಗಿರುವ ಹಳದಿ ನಾಗ ಎಂದರೆ ಪದ್ಮನಾಭ. ಶ್ರೀವಿಷ್ಣು ಶೇಷನಾಗನ ‘ಶಯ್ಯೆ’ಯ ಮೇಲೆ ಮಲಗಿರುತ್ತಾನೆ. ಸಾತ್ತ್ವಿಕ ನಾಗಗಳು ಸಿದ್ಧ ಮತ್ತು ಋಷಿಮುನಿಗಳ ಆಧೀನದಲ್ಲಿರುತ್ತವೆ. ಅವು ಅವರ ಆಜ್ಞೆಯ ಪಾಲನೆಯನ್ನು ಮಾಡುತ್ತವೆ. ಉದಾ. ಪ.ಪೂ. ದಾದಾಜಿ ವೈಶಂಪಾಯನರ ಆಜ್ಞೆಗನುಸಾರ ಸಾಧಕರಿಗೆ ಮತ್ತು ಆಶ್ರಮಗಳಿಗಾಗುತ್ತಿರುವ ಅನಿಷ್ಟ ಶಕ್ತಿಗಳ ತೊಂದರೆಗಳಿಂದ ರಕ್ಷಣೆ ಮಾಡಲು ಸನಾತನದ ವಿವಿಧ ಆಶ್ರಮಗಳ ಸುತ್ತಲೂ ಸೂಕ್ಷ್ಮದಿಂದ ಹಳದಿ ನಾಗಗಳ ಸೈನ್ಯವು ಸೇವೆಯಲ್ಲಿದೆ. ಹಳದಿ ನಾಗಗಳು ಉಚ್ಚ ದೇವತೆಗಳ ಉಪಾಸಕರಾಗಿರುವುದರಿಂದ ಅವುಗಳಲ್ಲಿ ದೈವಿ ಬಲವಿರುತ್ತದೆ. ಆದುದರಿಂದ ಅವರಿಗೆ ಆಶೀರ್ವಾದ ನೀಡುವ, ಅಂದರೆ ಸಂಕಲ್ಪಕ್ಕನುಸಾರ ಕಾರ್ಯವನ್ನು ಮಾಡುವ ಸಾಮರ್ಥ್ಯ ಪ್ರಾಪ್ತವಾಗಿದೆ.

೩. ನಾಗಗಳ ಉಪಾಸ್ಯ ದೇವತೆ

ಶಿವನು ಎಲ್ಲ ನಾಗಗಳ ಅಧಿಪತಿಯಾಗಿದ್ದಾನೆ. ಹೆಚ್ಚಿನ ನಾಗಗಳು ಶಿವನ ಉಪಾಸನೆಯನ್ನೇ ಮಾಡುತ್ತವೆ. ಕೆಲವು ನಾಗಗಳು ವಿಷ್ಣುವಿನ, ಕೆಲವು ನಾಗಗಳು ಶ್ರೀಗಣೇಶನ ಉಪಾಸನೆಯನ್ನು ಮಾಡುತ್ತವೆ.

೪. ದೇವತೆಗಳ ಶ್ರೇಣಿಯಲ್ಲಿ ನಾಗಗಳ ಸ್ಥಾನ

ಅ. ನಾಗದೇವತೆಯನ್ನು ಕನಿಷ್ಠ ದೇವತೆಯೆಂದು ಪರಿಗಣಿಸಲಾಗುತ್ತದೆ.

ಆ. ಕೆಲವು ಸ್ಥಳಗಳಲ್ಲಿ ಸ್ಥಾನದೇವತೆಯೆಂದೂ ಅವು ಕಾರ್ಯ ಮಾಡುತ್ತಿರುತ್ತವೆ.

ಇ. ನಾಗದೇವತೆಗಳ ಸ್ಥಾನವು ಅರಳಿಮರ ಅಥವಾ ಆಲದ ಮರದ ಕೆಳಗೆ ಅಥವಾ ದೊಡ್ಡ ಹುತ್ತದಲ್ಲಿರುತ್ತದೆ.

ಈ. ಸಾತೆರಿ ದೇವಿಯು ಹುತ್ತದಲ್ಲಿ ವಾಸವಿರುತ್ತದೆ. ದೇವಿಯ ಸೇವೆಯನ್ನು ಮಾಡಲು ಮತ್ತು ಅವಳ ಗಣವೆಂದು ಕಾರ್ಯ ಮಾಡುವುದಕ್ಕಾಗಿ ಸಾತ್ತ್ವಿಕ ನಾಗವು ಹುತ್ತದಲ್ಲಿ ವಾಸಿಸುತ್ತದೆ.

೫. ಪೂರ್ವಜರ ಮತ್ತು ನಾಗಗಳ ಪರಸ್ಪರ ಸಂಬಂಧ

ಭುವರ್ಲೋಕ ಮತ್ತು ಪಿತೃಲೋಕದಲ್ಲಿ ಸಿಲುಕಿರುವ ಪೂರ್ವಜರು ಹೆಚ್ಚಾಗಿ ಕಪ್ಪು ನಾಗಗಳ ರೂಪದಲ್ಲಿ ವಂಶಜರಿಗೆ ದರ್ಶನವನ್ನು ನೀಡುತ್ತಾರೆ. ಸಾತ್ತ್ವಿಕ ಪೂರ್ವಜರು ಹಳದಿ ನಾಗಗಳ ರೂಪದಲ್ಲಿ ದರ್ಶನ ಮತ್ತು ಆಶೀರ್ವಾದ ನೀಡುತ್ತಾರೆ. ಮನೆ, ಸಂಪತ್ತು ಮತ್ತು ಕುಟುಂಬದವರ ವಿಷಯದಲ್ಲಿ ಬಹಳ ಆಸಕ್ತಿ ಇರುವ ಪೂರ್ವಜರಿಗೆ ಪೃಥ್ವಿಯ ಮೇಲೆ ನಾಗಗಳ ಯೋನಿಯಲ್ಲಿ ಜನ್ಮ ಸಿಗುತ್ತದೆ. ಮನುಷ್ಯ ಜನ್ಮದಲ್ಲಿ ಇತರರಿಗೆ ತೊಂದರೆ ನೀಡಿ ಅಡ್ಡ ಮಾರ್ಗದಿಂದ ಸಂಪತ್ತನ್ನು ಗಳಿಸಿದ ಪೂರ್ವಜರು ಮುಂದಿನ ಜನ್ಮ ಪಾತಾಳದ ಕಪ್ಪು ನಾಗಗಳ ರೂಪದಲ್ಲಿ ಆಗುತ್ತದೆ. ದೇವಕಾರ್ಯದಲ್ಲಿ ಸಹಭಾಗಿಯಾಗಿರುವ ಮತ್ತು ಸಜ್ಜನ ಪ್ರವೃತ್ತಿಯ ಪೂರ್ವಜರು ಪಿತೃಲೋಕದಲ್ಲಿ ವಾಸ ಮಾಡಿದ ನಂತರ ಕೆಲವು ಸಮಯ ಶಿವಲೋಕದ ಸಮೀಪದಲ್ಲಿರುವ ದೈವಿ ನಾಗಲೋಕದಲ್ಲಿ ಹಳದಿ ನಾಗಗಳ ರೂಪದಲ್ಲಿ ವಾಸ ಮಾಡುತ್ತವೆ.

೬. ಕಲಿಯುಗದಲ್ಲಿ ಮನುಷ್ಯನು ನಾಗಗಳ ಸ್ಥಾನವಾಗಿರುವ ನಾಗಬನಗಳನ್ನು ನಾಶ ಮಾಡಿರುವುದರಿಂದ ಮನುಷ್ಯನಿಗೆ ನಾಗಗಳ ತೊಂದರೆಯಾಗುವುದು

ಕಲಿಯುಗದ ಆರಂಭದವರೆಗೆ ವಿವಿಧ ಸ್ಥಳಗಳ ದೇವತೆಗಳಿಗೆ ಅವರ ಸ್ವತಂತ್ರ ಸ್ಥಾನವನ್ನು ನೀಡಲಾಗುತ್ತಿತ್ತು, ಉದಾ. ಸ್ಥಾನದೇವತೆ, ಗ್ರಾಮದೇವತೆ, ಕ್ಷೇತ್ರಪಾಲ ದೇವತೆ ಇತ್ಯಾದಿ. ಅದೇ ರೀತಿಯಲ್ಲಿ ಭಾರತದಲ್ಲಿ ಪ್ರತಿಯೊಂದು ಊರಿನಲ್ಲಿ ನಾಗಗಳಿಗೆ ವಾಸಿಸಲು ನಾಗಬನಗಳಿದ್ದವು. ಈ ಸ್ಥಳಗಳಲ್ಲಿ ದೊಡ್ಡ ದೊಡ್ಡ ವೃಕ್ಷಗಳು ಹತ್ತಿರ – ಹತ್ತಿರವಿರುತ್ತಿದ್ದವು ಮತ್ತು ಅವುಗಳ ಬುಡದಲ್ಲಿ ಹುತ್ತಗಳಿರುತ್ತಿದ್ದವು. ಪ್ರತಿಯೊಂದು ಊರಿನ ನಾಗಗಳು ಅಲ್ಲಿ ಇರುತ್ತಿದ್ದವು. ನಾಗಗಳಿಗೆ ಸ್ವತಂತ್ರ ಸ್ಥಾನ ನೀಡುವುದರಿಂದ ಅವು ಮನುಷ್ಯನಿಗೆ ತೊಂದರೆಯನ್ನು ನೀಡುವುದಿಲ್ಲ ಮತ್ತು ಮನುಷ್ಯನ ಮತ್ತು ಅವನ ಸಂಪತ್ತಿನ ರಕ್ಷಣೆಯನ್ನು ಮಾಡುತ್ತಿದ್ದವು. ವಿಜ್ಞಾನಯುಗದಲ್ಲಿ ಮಾನವನು ಭೌತಿಕ ಪ್ರಗತಿ ಮಾಡಿಕೊಳ್ಳಲು ಗ್ರಾಮಗ್ರಾಮಗಳಲ್ಲಿರುವ ನಾಗಬನಗಳನ್ನು ನಾಶ ಮಾಡಿ ಅಲ್ಲಿ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿದನು. ಆದುದರಿಂದ ಮನುಷ್ಯನಿಗೆ ನಾಗಗಳ ಉಪಟಳವನ್ನು ಸಹಿಸ ಬೇಕಾಗಿ ಬಂದಿದೆ. ಕೇರಳ ರಾಜ್ಯದಲ್ಲಿ ಅನೇಕ ಕಡೆಗಳಲ್ಲಿ ಇದೇ ರೀತಿಯಲ್ಲಿ ನಾಗಬನಗಳನ್ನು ಧ್ವಂಸ ಮಾಡಿ ಅಲ್ಲಿ ಕಟ್ಟಡಗಳನ್ನು ಕಟ್ಟಿದ್ದರಿಂದ ಅಲ್ಲಿನ ಹಿಂದೂಗಳಿಗೆ ನಾಗಗಳು ಕಚ್ಚುವುದು, ಕನಸಿನಲ್ಲಿ ನಾಗಗಳು ಕಾಣಿಸುವುದು, ಮನೆಯ ಜನರು ಸತತ ಅನಾರೋಗ್ಯವಿರುವುದು ಈ ರೀತಿಯ ತೊಂದರೆಗಳಾಗುತ್ತವೆ, ಎಂದು ಓರ್ವ ಸಾಧಕನು ನನಗೆ ಕೆಲವು ವರ್ಷಗಳ ಹಿಂದೆ ಹೇಳಿದ್ದನು. – ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ಪ್ರಾಪ್ತವಾದ ಜ್ಞಾನ)

೭. ನಾಗರಪಂಚಮಿ

ಶ್ರಾವಣ ತಿಂಗಳ ಶುಕ್ಲ ಪಂಚಮಿಯಂದು ನಾಗನ ಪೂಜೆಯನ್ನು ಮಾಡಲಾಗುತ್ತದೆ. ಹಾಗಾಗಿ ಆ ತಿಥಿಗೆ ‘ನಾಗರಪಂಚಮಿ’ ಎಂದು ಕರೆಯುತ್ತಾರೆ.

೭ ಅ. ನಾಗಪಂಚಮಿಯ ಇತಿಹಾಸ

೭ ಅ ೧. ಕಾಲಿಯಾಮರ್ದನದ ತಿಥಿ : ಶ್ರಾವಣ ಶುಕ್ಲ ಪಕ್ಷ ಪಂಚಮಿಯ ದಿನದಂದು ಭಗವಾನ ಶ್ರೀಕೃಷ್ಣನು ಗೋಕುಲದಲ್ಲಿರುವಾಗ ಯಮುನಾ ನದಿಯಲ್ಲಿ ಕಾಲಿಯಾ ಎಂಬ ನಾಗನ ಮರ್ದನವನ್ನು ಮಾಡಿದನು.

೭ ಅ ೨. ಸರ್ಪಯಜ್ಞದ ಸಮಾಪ್ತಿಯ ದಿನ : ಈ ದಿನ ಆಸ್ತಿಕ ಋಷಿಗಳ ಮಾರ್ಗದರ್ಶನಕ್ಕನುಸಾರ ಜನಮೇಜಯ ರಾಜನು ಸರ್ಪಯಜ್ಞ ಮಾಡುವುದನ್ನು ನಿಲ್ಲಿಸಿದನು ಮತ್ತು ಆಸ್ತಿಕ ಋಷಿಗಳು ವಿಶ್ವದಲ್ಲಿನ ಎಲ್ಲ ನಾಗಗಳಿಗೆ ಅಭಯವನ್ನು ನೀಡಿದರು.

೭ ಆ. ನಾಗನ ಪೂಜೆಯ ಮಹತ್ವ

ಶಿವನು ಹಾಲಾಹಲ ವಿಷದ ಸೇವನೆಯನ್ನು ಮಾಡಿದಾಗ ಅವನಿಗೆ ಸಹಾಯ ಮಾಡಲು ಒಂಭತ್ತು ನಾಗಗಳು ಬಂದವು ಮತ್ತು ಅವುಗಳು ಸಹ ಹಾಲಾಹಲದ ಅಂಶವನ್ನು ಸೇವನೆ ಮಾಡಿದವು. ಇದರಿಂದ ಶಿವನು ನಾಗಗಳ ಮೇಲೆ ಪ್ರಸನ್ನನಾದನು. ನಾಗಗಳು ಸಮಸ್ತ ಸೃಷ್ಟಿಯ ರಕ್ಷಣೆಯನ್ನು ಮಾಡಲು ನೀಡಿದ ಯೋಗದಾನಕ್ಕಾಗಿ ‘ಮನುಷ್ಯನು ಯಾವಾಗಲೂ ನಾಗಗಳ ಬಗ್ಗೆ ಕೃತಜ್ಞನಾಗಿದ್ದು ಅವನು ನಾಗಗಳ ಪೂಜೆಯನ್ನು ಮಾಡುತ್ತಾನೆ’, ಎಂಬ ಆಶೀರ್ವಾದವನ್ನು ನಾಗಗಳಿಗೆ ನೀಡಿದನು. ಅಂದಿನಿಂದ ಒಂಭತ್ತು ನಾಗಗಳು ಮನುಷ್ಯನಿಗೆ ಪೂಜನೀಯವಾದವು. ಒಂಭತ್ತು ನಾಗಗಳು ಒಂಭತ್ತು ವಿಧದ ಪವಿತ್ರಕಗಳನ್ನು (ಚೈತನ್ಯಲಹರಿಗಳು) ಗ್ರಹಣ ಮಾಡುವ ಘಟಕಗಳಾಗಿವೆ. ಅವುಗಳ ಪೂಜೆಯಿಂದ ಚೈತನ್ಯ ಲಹರಿಗಳನ್ನು ಧಾರಣೆ ಮಾಡುವ ಸಮೂಹದ್ದೇ ಪೂಜೆಯಾಗುತ್ತದೆ.

೭ ಆ ೧. ಪೂಜೆಯ ವಿಧಿ : ಈ ದಿನದಂದು ಹಾವಾಡಿಗರು ನಾಗನನ್ನು ತರುತ್ತಾರೆ. ಅದರ ಪೂಜೆಯನ್ನು ಮಾಡಿ ಅದಕ್ಕೆ ಹಾಲನ್ನು ನೀಡುತ್ತಾರೆ. ಮನೆಯಲ್ಲಿ ಸ್ವಚ್ಛವಾದ ಮರದ ಹಲಗೆಯ ಮಣೆಯ ಮೇಲೆ ಗಂಧ, ಅರಿಶಿಣ ಮತ್ತು ಕುಂಕುಮ ಇವುಗಳ ಮಿಶ್ರಣದಿಂದ ಐದು ಹೆಡೆಗಳ ನಾಗನನ್ನು ಬಿಡಿಸಬೇಕು ಅಥವಾ ರಕ್ತಚಂದನದಿಂದ ಒಂಭತ್ತು ನಾಗಗಳ ಆಕೃತಿಯನ್ನು ಬಿಡಿಸಬೇಕು. ಕೆಲವು ಸ್ಥಳಗಳಲ್ಲಿ ಮಣ್ಣಿನ ನಾಗವನ್ನು ಸಹ ತಯಾರಿಸಿ ಅದರ ಪೂಜೆಯನ್ನು ಮಾಡುತ್ತಾರೆ. ನಾಗನ ಪೂಜೆಯನ್ನು ಮಾಡುವಾಗ ಅನಂತ, ವಾಸುಕಿ, ಶೇಷ, ಪದ್ಮನಾಭ, ಕಂಬಲ, ಶಂಖಪಾಲ, ಧೃತರಾಷ್ಟ್ರ, ತಕ್ಷಕ ಮತ್ತು ಕಾಲಿಯಾ ಈ ಒಂಭತ್ತು ನಾಗಗಳ ಹೆಸರುಗಳನ್ನು ಉಚ್ಚರಿಸಿ ಗಂಧ, ಅಕ್ಷತೆ ಮತ್ತು ಹೂವುಗಳನ್ನು ಅರ್ಪಿಸಬೇಕು. ಮನೆಯ ಜನರು ಹೂವು, ಗರಿಕೆ, ಅರಳು, ಕಡಲೆಕಾಳು ಮುಂತಾದ ಪದಾರ್ಥಗಳನ್ನು ಅರ್ಪಿಸಬೇಕು.

೭ ಆ ೨. ಪೂಜೆಯ ಫಲಪ್ರಾಪ್ತಿ : ಒಂಭತ್ತು ನಾಗಗಳ ಪೂಜೆಯನ್ನು ಮಾಡುವುದರಿಂದ ಸರ್ಪಭಯ ಉಳಿಯುವುದಿಲ್ಲ ಮತ್ತು ವಿಷಬಾಧೆಯಾಗುವ ಸಂಕಟ ತಪ್ಪುತ್ತದೆ. – ಕು. ಮಧುರಾ ಭೋಸಲೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೯.೭.೨೦೧೭)

ನಾಗರಪಂಚಮಿಯ ಆಚರಣೆಯ ಬಗ್ಗೆ ತಿಳಿದುಕೊಳ್ಳಲು ಈ ಲೇಖನ ಓದಿ.

Leave a Comment